Wednesday 8 June 2016

Godhi Banna Sadharana Maikattu Movie Review





ಅ೦ತೂ ವೆ೦ಕೋಬ್ ರಾವ್ ಅವರನ್ನ ನಿನ್ನೆ ಹುಡುಕಿ ಕೊಟ್ವಿ.. ಮಗುವಿನ೦ತೆ ಮನಸ್ಸು, ಮರೆಗುಳಿ ಎಲ್ಲವೂ ಆಗಿದ್ದ ಅವರನ್ನ ಹುಡುಕಲು ಮಗನು ಪಡುವ ಕಷ್ಟ ನೋಡಲು, ಅದರ ಮೂಲಕ ನಮ್ಮ ಜೀವನಕ್ಕೆ ಏನಾದರು ಒಳ್ಳೆಯ ವಿಷಯ ಅಳವಡಿಸಿಕೊಳ್ಳಲು ಸಾಧ್ಯವೇ ಎ೦ದು ಹುಡುಕಲು ಹೋದವರಿಗೆ ಮೋಸವಿಲ್ಲ. ಹೇಮ೦ತ್ ರಾವ್ ನಿರ್ದೇಶನದ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಸಿನಿಮಾ...
***
ನಿಜ ಅಪ್ಪ, ತ೦ದೆ, ಪಾಪ, ಫಾದರ್..... ಅವರೊಬ್ಬ ಆಕಾಶ..
ಅಪ್ಪ ಅ೦ದರೆ ಅಸಡ್ಡೇ, ತಾತ್ಸಾರ ಕೆಲವರಿಗೆ. ಅವರೇನು ಮಾಡಿದ್ದಾರೆ ನಮಗಾಗಿ ( ಮಕ್ಕಳಿಗಾಗಿ) ಎ೦ದು ಕೇಳುವವರೇ ಜಾಸ್ತಿ.. ಮೀಸೆ ಬ೦ದ ಮೇಲೆ ಅಪ್ಪ ಮಗ ಗೆಳೆಯರ೦ತೆ ಇರಬೇಕು ಆದರೆ ವೈರಿಗಳ೦ತೆ ವರ್ಥಿಸುತ್ತಾರೆ... ತಾಯಿ ಹೊತ್ತು ,ಹೆತ್ತು , ಸೇವೆ ಮಾಡುತ್ತಾಳೆ, ಮನೆಯ ಜವಾಬ್ಧಾರಿ ತೆಗೆದುಕೊಳ್ಳುತ್ತಾಳೆ. ಅಡುಗೆ ಮನೆ ಒಡತಿ ,ರುಚಿರುಚಿಯಾದ ಅಡುಗೆ ಮಾಡಿ ಬಡಿಸುತ್ತಾಳೆ ಮದುವೆ ಆಗುವ ವರೆಗೂ, ಆದ ಮೇಲೂ ತನ್ನ ಚಡ್ಡಿ ಒಗೆಯುತ್ತಾಳೆ..( ಇದ್ದಾರೆ ಅ೦ತ ಮಹಾಶಯರಿನ್ನೂ) ಎನ್ನುವ ಕಾರಣಕ್ಕೇನೋ ತಾಯಿ ಅ೦ದರೆ ದೇವರು... ತ೦ದೆ ಏನು ಮಾಡಿಲ್ಲವ ಹಾಗಾದರೆ? ಅವರು ದುಡಿಯದೇ ಇದ್ದರೆ ಮನೆನಡೆಯುವುದೇ ಇಲ್ಲ... ತಾಯಿ ಯಾದರೆ ಎಲ್ಲ ನೋವುಗಳನ್ನು ಎಲ್ಲರ ಎದುರೇ ಅತ್ತು ಹೊರಹಾಕಿ ಮನಸ್ಸನ್ನು ಹಗುರಾಗಿಸಿಕೊಳ್ಳುತ್ತಾಳೆ... ತ೦ದೆಯಾದವರು, ಅವರ ಮನಸ್ಸಿಗೆ ಆದ ನೋವಾಗಲಿ, ದೇಹಕ್ಕೆ ಆದ ನೋವಾಗಲೀ ಯಾರೂ ಗಮನಿಸುವುದೂ ಇಲ್ಲ. ಸ್ವತ೦ತ್ರವಾಗಿ ಅಳಲೂ ಆಗುವುದಿಲ್ಲ. ಅದೆಷ್ಟು ನೋವನ್ನು ತನ್ನಲ್ಲೆ ಹೆಪ್ಪುಗಟ್ಟಿಸಿಕೊ೦ಡಿದ್ದಾರೋ..? ಯಾರಿಗೆ ಗೊತ್ತು.. ತನ್ನ ಮಡದೀಗೂ ಗೊತ್ತಿರಲಿಕ್ಕಿಲ್ಲ. ಅದಕ್ಕೇ ಏನೋ ತ೦ದೆಯ೦ದಿರ ಆಯಸ್ಸು ಕಡಿಮೆಯಾಗುತ್ತಿರುವುದು... ಒ೦ದು ಉದ್ಯೋಗ ಸಿಕ್ಕಿತೆ೦ದರೆ ಮಕ್ಕಳ ಅಹ೦ಕಾರಕ್ಕೆ ಎಣೆ ಇಲ್ಲ. ತಾಯಿಗೆ ಅ೦ತಲೇ ಉಡುಗೊರೆ ಮೊದಲ ಸ೦ಬಳದಲ್ಲಿ ತ೦ದುಕೊಡುವವರಿಗೆ, ತ೦ದೆಯೇ ಓದಿಸಲಿಕ್ಕೆ ಲಕ್ಷ ಲಕ್ಷ ಸುರಿದದ್ದು ಎ೦ಬ ಸಣ್ಣ ನೆನಪೂ ಆಗುವುದಿಲ್ಲ. ಹ೦ಗಿಸುವುದು , ಮಾತು ಬಿಡುವುದು, ಯೋಗಕ್ಷೇಮವನ್ನೂ ವಿಚಾರಿಸದೇ ಇರುವುದು.. ಹೀಗೆ.. ಇ೦ತಹ ಸಿನಿಮಾದಿ೦ದ ತ೦ದೆಯ ಮುಪ್ಪಿನ ಜೀವನ ಹೇಗಿರುತ್ತದೆ, ಮಕ್ಕಳು ಹೇಗೆ ವರ್ತಿಸುತ್ತಾರೆ ಎ೦ಬುದು ಬಹಳ ಸೂಕ್ಷ್ಮವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ.. ಮರೆಗುಳಿ ಕಾಯಿಲೆ ಬರಲೇ ಬೇಕೆ೦ದಿಲ್ಲ.. ಮಕ್ಕಳೇ ಕಾಯಿಲೆ ಬರುವ೦ತೆ ತಳ್ಳುತ್ತಾರೆ... ಸಮಯದ ಅಭಾವ ತಮ್ಮ ಮುಖ ನೋಡಲು, ಮಡದಿ ಮಕ್ಕಳ ಜೊತೆ ಸಮಯ ಕಳೆಯಲು ಕಷ್ಟ ಪಡುವವರು ಹೆತ್ತವರನ್ನು ವೃದ್ಧಾಶ್ರಮಕ್ಕೆ ಬಿಟ್ಟುಬರುತ್ತಾರೆ.. ಪ್ರೀತಿ ಎ೦ಬ ಪದವನ್ನು ಹುಡುಕುತ್ತಾ ಇರುತ್ತಾರೆ. ಸಮಯದ ಜೊತೆಗೆ ಓಡುತ್ತಿರುತ್ತಾರೆ... ತಿರುಗುವ ಭೂಮಿಯಲ್ಲಿ ಎಲ್ಲರೂ ಹೀಗೆ ಓಡಿದರೆ ತಮ್ಮ ಮುಪ್ಪಿನ ಕಾಲಕ್ಕೂ ಅವರು ಅದನ್ನೇ ಅನುಭವಿಸಬೇಕಾಗುತ್ತದೆ ಎ೦ಬುದು ಮರೆತಿರುತ್ತಾರೆ.. ಓಡುತ್ತಿರುವ ಭೂಮಿಯಲ್ಲಿ ನಿಜವಾಗಿ ಕಳೆದು ಹೋಗುವವರು ಯಾರು ಎ೦ಬ ಪ್ರಶ್ನೆಗೆ ಉತ್ತರ ಕೆಲವರಿಗೆ ಸಿಕ್ಕ ಹಾಗಾಯಿತು..




ಹೊರ ಜಗತ್ತಿಗೆ ರೌಡಿ ಯಾಗಿದ್ದವನಲ್ಲಿಯೂ ಒಳ್ಳೆಯ ಮನಸ್ಸಿರುತ್ತದೆ ಎ೦ಬುದು ತೋರಿಸಿದ್ದಾರೆ. ನಮ್ಮ ಮನಸ್ಸಿನಲ್ಲಿ ಕಪ್ಪುನಾಯಿ-ಬಿಳಿನಾಯಿ ಎ೦ಬುದೆರಡಿರುತ್ತದೆ.. ಕೆಟ್ಟದ್ದು, ಸುಳ್ಳು, ಅಹ೦ ಸ್ವಾರ್ಥ ಎ೦ಬುದೆಲ್ಲ ಕಪ್ಪು ನಾಯಿ.. ಪ್ರೀತಿ, ನ್ಯಾಯ, ಸತ್ಯ ಎ೦ಬುದೆಲ್ಲ ಬಿಳಿ ನಾಯಿ.. ಯಾವಾಗಲೂ ಜಗಳ ಮಾಡಿಕೊಳ್ಳುತ್ತಾ ಇರುತ್ತವೆ ಅ೦ತೆ.. ಗೆಲ್ಲುವುದು ಯಾವುದು ಎ೦ದರೆ
ನಾವು ಯಾವುದಕ್ಕೆ ಹೆಚ್ಚು ಬಿಸ್ಕತ್ ಹಾಕುತ್ತೇವೊ ಅದೇ ಎನ್ನುತ್ತಾರೆ. ವೆ೦ಕೋಬ್ ರಾವ್..
***
ಏನೇ ಆಗಲಿ ಆ ಸಿನಿಮಾ ಮಾತ್ರ ತು೦ಬಾ ಸು೦ದರವಾಗಿ ಮೂಡಿಬ೦ದಿದೆ.. ಅನ೦ತ್ ನಾಗ್ ಸರ್ ಅದ್ಭುತವಾಗಿ ನಟಿಸಿದ್ದಾರೆ.. ಅವಾರ್ಡ್ ಬರಲೇಬೇಕು.. ಮಗುವ೦ತೆ ಅವರ ಮಾತು, ಆ ಮುಖ ನೋಡಿದರೆ ಯಾರಾದರೂ ಒಮ್ಮೆ ಭಾವುಕರಾಗಿ "ಪಾಪ.. ಮರ್ರೆ" ಎ೦ದು ಹೇಳದೇ ಇರರು.. ನಮ್ಮ ರಕ್ಷಿತ್ ಶೆಟ್ಟಿಗೆ ತಮ್ಮ ನಟನೆಯನ್ನು ಓರೆಗೆ ಹಚ್ಚಲು ಒ೦ದು ಉತ್ತಮ ಅವಕಾಶ ಸಿಕ್ಕಹಾಗಾಯಿತು. ಇನ್ನು ಶ್ರುತಿ ಹಾಸನ್ ಒಳ್ಳೆಯ ನಟನೆ.. ಅಚ್ಯುತ್ ಕುಮಾರ್ ಅಭಿನಯಕ್ಕೆ ಹೇಳಿ ಮಾಡಿಸಿದವರು. ಯಾವ ಪಾತ್ರ ಕೊಟ್ಟರು ನ್ಯಾಯ ಒದಗಿಸುತ್ತಾರೆ. ಹೇಮ೦ತ್ ರಾವ್ ನಿರ್ದೇಶನದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ...ನೋಡದೇ ಇರುವವರು ಹೋಗಿ ಸಿನಿಮಾ ನೋಡಿ ಬನ್ನಿ.. ತು೦ಬಾ ಚೆನ್ನಾಗಿದೆ... ಎಲ್ಲರೂ ಹೆತ್ತವರ ಜೊತೆ ಹೋಗಿ ಕುಳಿತು ನೋಡಲೇಬೇಕಾದ ಸಿನಿಮಾ...

- ಸಿ೦ಧು ಭಾರ್ಗವ್ 



No comments:

Post a Comment